ಗುಂಡಬಾಳದಲ್ಲಿ ಯಕ್ಷಗಾನ ಮಹಾಭಾರತ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಜೂನ್ 5 , 2015
|
ಜೂನ್ 5, 2015
|
ಗುಂಡಬಾಳದಲ್ಲಿ ಯಕ್ಷಗಾನ ಮಹಾಭಾರತ
ಗುಂಡಬಾಳ :
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಂಡಬಾಳ ಎರಡು ಕಾರಣಗಳಿಗಾಗಿ ಪ್ರಸಿದ್ಧವಾಗಿದೆ. ಮೊದಲನೆಯದು ಲಕ್ಷ್ಮೀ ವೆಂಕಟೇಶ್ವರ ಸಹಿತ ಮುಖ್ಯಪ್ರಾಣನ ದೇವಾಲಯ. ಮತ್ತೂಂದು ವರ್ಷದ ಆರು ತಿಂಗಳುಗಳ ಕಾಲ ನಡೆಯುವ ಯಕ್ಷಗಾನ.
ಹೌದು, ನಮ್ಮ ನಿತ್ಯದ ಬದುಕು ನಾವು ಊಹಿಸಿಕೊಳ್ಳಲು ಸಾಧ್ಯವಿಲ್ಲದಷ್ಟು ವೇಗವಾಗಿ ಬದಲಾಗುತ್ತಿದೆ. ವಾಣಿಜ್ಯೀಕರಣ, ಆಧುನಿಕ ಬದುಕಿನ ಒತ್ತಡ, ವೈಚಾರಿಕ ನೆಲೆಗಟ್ಟಿನ ಚಿಂತನ ಶೀಲತೆ- ಹೀಗೆ ಹಲವು ಕಾರಣ ಗಳ ನಡುವೆಯೂ ವರ್ಷದ ಆರು ತಿಂಗಳು, ಅದೂ ರಾತ್ರಿ 9.30ರಿಂದ ಬೆಳಗಿನ ತನಕ ಹರಕೆಯ ಯಕ್ಷಗಾನ ಆಟ ನಡೆಯುತ್ತದೆ ಎಂದರೆ ಯಾರೂ ಆಶ್ಚರ್ಯಪಡಬೇಕಿಲ್ಲ. ಪ್ರೇಕ್ಷಕರು ಬೆರಳೆಣಿಕೆಯಷ್ಟಿರಲಿ, ಜನರಿಂದ ಪ್ರೋತ್ಸಾಹ ದೊರೆಯಲಿ ಬಿಡಲಿ, ನಿತ್ಯ ಚೆಂಡೆ ಮೊಳಗುತ್ತದೆ. ಅಕ್ಕಪಕ್ಕದ ಊರುಗಳಿಂದ ಒಬ್ಬೊಬ್ಬರೇ ಬೈಕಿನಲ್ಲೋ ಕಾರಿನಲ್ಲೋ ಅಥವಾ ಟಾರ್ಚ್ ಹಿಡಿದು ನಡೆಯುತ್ತಲೋ ಬಂದು ಸೇರುತ್ತಾರೆ. ತಮಗೆ ಸಾಧ್ಯವಾದಷ್ಟು ಹೊತ್ತು ಆಟ ನೋಡಿ ಹೊರಡುತ್ತಾರೆ (ಬೆಳಗಿನ ಕೆಲಸಗಳ ಕಾರಣಕ್ಕೆ ಅಡ್ಡಿಯಾಗಬಾರದಲ್ಲವೇ!).
ಇಲ್ಲಿ ಇಂಥದೇ ಪ್ರಸಂಗ, ಇಂಥದೇ ವಸ್ತು, ಇಂಥವರೇ ಕಲಾವಿದರು ಎಂಬ ನಿಯಮ ಇರದಿದ್ದರೂ ವರ್ಷದ ಕೊನೆಯ ದಿನ ಕಲ್ಯಾಣ ಗುಣದ ಆಟ ಮತ್ತು ಹನುಮಂತನ ಪಾತ್ರವಿರುವ ಆಟದೊಂದಿಗೆ ಮುಕ್ತಾಯ ಇವೆರಡನ್ನೂ ಪಾಲಿಸಿಕೊಂಡು ಬರಲಾಗುತ್ತಿದೆ. ಇಲ್ಲಿ ಮುಖ್ಯ ಪ್ರಾಣ ಪ್ರಸಾದಿತ ಯಕ್ಷಗಾನ ಮಂಡಲಿಯ ಸದಸ್ಯ ರಲ್ಲದೆ ಪ್ರಸಿದ್ಧ ಕಲಾವಿದರೂ ಕಲಿಕಾ ಶಿಬಿರಾರ್ಥಿ ಗಳೂ ಭಾಗವಹಿಸುವುದು ವಿಶೇಷ. ಉತ್ತರ ಕನ್ನಡ ಜಿÇÉೆಯ ಬಹುಪಾಲು ಕಲಾವಿದರು ರೂಪು ಗೊಳ್ಳಲು ಪ್ರಾಯೋಗಿಕ ರಂಗಭೂಮಿಯಾಗಿ ಈ ವೇದಿಕೆ ನೀಡಿರುವ ಕೊಡುಗೆ ದೊಡ್ಡದು.
ಹೊಸ್ತೋಟ ಭಾಗವತರ ಶತಕಾರ್ಧ ಪ್ರಸಂಗಗಳು
ಈ ವರ್ಷದ ಕೊನೆಯಲ್ಲಿ (ಎಪ್ರಿಲ್ 20ರಿಂದ ಮೇ 7ರವರೆಗೆ) ಮಹಾಭಾರತ ನಡೆದಷ್ಟೇ ದಿನ ಗಳಲ್ಲಿ ಯಕ್ಷಗುರು ಹೊಸ್ತೋಟ ಮಂಜುನಾಥ ಭಾಗವತರು ರಚಿಸಿದ ಮಹಾಭಾರತದ 51 ಪ್ರಯೋಗಗಳನ್ನು ಪ್ರಸ್ತುತಪಡಿಸಿದ್ದು ವಿಶೇಷ. ಕಪ್ಪೇಕಾರು ಸುಬ್ರಾಯ ಭಾಗವತರ ಪ್ರಧಾನ ನಿರ್ದೇಶನದಲ್ಲಿ ನಡೆದ ಈ ಪ್ರಸಂಗ ಪ್ರಯೋಗ ಯಕ್ಷಗಾನ ರಂಗದಲ್ಲಿ ಮೈಲುಗಲ್ಲು. ಹೀಗೆ ಒಬ್ಬರೇ ಬರೆದ, ಒಂದೇ ವಿಷಯದ ಪ್ರಸಂಗವುಳ್ಳ ಆಟವನ್ನು ಒಂದೇ ಸ್ಥಳದಲ್ಲಿ ನಿರಂತರವಾಗಿ ಪ್ರದರ್ಶಿಸಿರು ವುದು ಅಪರೂಪ. ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೊಂಡದಕುಳಿ ರಾಮಚಂದ್ರ ಹೆಗಡೆ, ಶ್ರೀಪಾದ ಹೆಗಡೆ ಹಡಿನಬಾಳು, ಕೆರೆಮನೆ ಶಿವಾನಂದ ಹೆಗಡೆ ಮುಂತಾದ ಯಕ್ಷಗಾನ ಕ್ಷೇತ್ರದ ದಿಗ್ಗಜರು ಕೂಡ ಈ ಪ್ರಸಂಗಗಳಲ್ಲಿ ಭಾಗವಹಿಸಿದ್ದಾರೆ.
ಬೆಂಗಳೂರಿನ ಅನೇಕ - ನಾರಾಯಣ ಜೋಶಿ ಚಾರಿಟೆಬಲ್ ಟ್ರಸ್ಟ್ (ರಿ.) ಮತ್ತು ಬೆಳೆಯೂರಿನ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಲಿಗಳ ವತಿಯಿಂದ ಮಹಾ ಭಾರತದ ಕೊನೆಯ ಪ್ರಸಂಗದ (ವೀರವರ್ಮ ಕಾಳಗ-ಸ್ವರ್ಗಾರೋಹಣ) ದಿನ ಹೊಸ್ತೋಟ ಮಂಜುನಾಥ ಭಾಗವತರನ್ನು ಆತ್ಮೀಯವಾಗಿ ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಭಾಗವತರು, 60 ವರ್ಷಗಳ ಹಿಂದೆ ಶಿವರಾಮ ಹೆಗಡೆ ಅವರ ಜತೆಗೆ ಮೊದಲ ಬಾರಿಗೆ ಗುಂಡಬಾಳಕ್ಕೆ ಬಂದಿದ್ದ ದಿನಗಳನ್ನು ನೆನಪಿಸಿಕೊಂಡರು. "ಕಳೆದ ಈ 18 ದಿನಗಳೂ ನಾನು ಬೆಳಗಿನ ತನಕ ಆಟ ನೋಡಿದ್ದೇನೆ. ಹೀಗೆ ಯಾವ ಫಲಾಪೇಕ್ಷೆಯೂ ಇಲ್ಲದೆ ಪ್ರಸಂಗ ನೋಡುವುದೂ ಕೂಡ ಒಂದು ರೀತಿಯ ಸೇವೆ ಹರಕೆ ಎಂದು ಭಾವಿಸಿದ್ದೇನೆ. ಹೀಗೆ ಬಯಲಿನಲ್ಲಿ ಕುಳಿತು ನೋಡುವ ಕಾರಣಕ್ಕಾಗಿ ಇದು ವೈಜ್ಞಾನಿಕವಾಗಿಯೂ ಆರೋಗ್ಯಪೂರ್ಣವೆಂಬುದು ನನ್ನ ನಂಬಿಕೆ' ಎಂದರು. "ಪ್ರಸಂಗ ಬರೆಯುವುದು ನನ್ನ ಕರ್ಮ, ಅವುಗಳನ್ನು ಓದಲಿ ಬಿಡಲಿ, ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಅವು ಪ್ರಯೋಗ ವಾದರೆ ನನ್ನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಅನುಕೂಲವಾಗುತ್ತದೆ. ಹೀಗೆ ನನ್ನ ಪ್ರಸಂಗಗಳಿಗೆ ವೇದಿಕೆ ಒದಗಿಸಿದ ಎಲ್ಲರಿಗೂ ಧನ್ಯವಾದಗಳು' ಎಂದು ಹೇಳಲು ಭಾಗವತರು ಮರೆಯಲಿಲ್ಲ.
ಸರಣಿ ಯಕ್ಷಗಾನ ಪ್ರದರ್ಶನ ಆಯೋಜನೆ ಯಲ್ಲಿ ಮುಖ್ಯಪ್ರಾಣ ಪ್ರಸಾದಿತ ಯಕ್ಷಗಾನ ಮಂಡಲಿಯ ಮ್ಯಾನೇಜರ್ ಪ್ರಭಾಕರ ಚಿಟ್ಟಾಣಿ, ದೇವಾಲಯದ ಆಡಳಿತ ಮಂಡಲಿಯ ಸದಸ್ಯರಾದ ವಸಂತ ಕಾಮತ್ ಮುಂತಾದವರ ಕಾರ್ಯಕ್ರಮತೆ, ಕಲಾಪ್ರೇಮ, ನಿಸ್ವಾರ್ಥ ಸೇವೆ ಎದ್ದು ಕಾಣುತ್ತಿದ್ದವು. ಇಂಥ ಅಪರೂಪದ ಪ್ರಯೋಗ ಯಕ್ಷಗಾನ ಪ್ರಸಂಗ ಗಳಿಗೆ ಯಾವತ್ತೂ ವೇದಿಕೆಯಾಗಲಿ ಎಂಬುದು ಎಲ್ಲ ಕಲಾಭಿಮಾನಿಗಳ ಆಶಯ.
ಕೃಪೆ :
http://udayavani.com
|
|
|